ಶುಕ್ರವಾರ, ಡಿಸೆಂಬರ್ 31, 2010

ಸಂಜೋತಾ ಸ್ಫೋಟದಲ್ಲಿ ಅಸೀಮಾನಂದನ ನೇರ ಪಾತ್ರ: ಎನ್‌ಐಎ


ಹೊಸದಿಲ್ಲಿ, ಡಿ.31: ಕೇಸರಿ ಉಗ್ರ ಸ್ವಾಮೀ ಅಸೀಮಾನಂದ 2007ರಲ್ಲಿ 68 ಜನರ ಸಾವಿಗೆ ಕಾರಣವಾದ ಸಂಜೋತಾ ಎಕ್ಸ್‌ಪ್ರೆಸ್ ಬಾಂಬ್ ಸ್ಫೋಟದಲ್ಲಿ ನೇರವಾಗಿ ಭಾಗಿಯಾಗಿ ದ್ದಾನೆಂದು ರಾಷ್ಟ್ರೀಯ ತನಿಖೆ ಸಂಸ್ಥೆ ಖಾತರಿ ಪಡಿಸಿಕೊಂಡಿದೆಯೆಂದು ತಿಳಿದು ಬಂದಿದೆ. ರೈಲು ಸಹಿತ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಅಸೀಮಾನಂದ 2006ರ ಫೆ.11, 12 ಹಾಗೂ 13ರಂದು ಗುಜರಾತ್‌ನ ಡಾಂಗ್ಸ್‌ನಲ್ಲಿ ಸಭೆಯೊಂದನ್ನು ನಡೆಸಿದ್ದನೆಂದು ಎನ್‌ಐಎ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಅಸೀಮಾನಂದ ಒಬ್ಬ ಸಿದ್ಧಾಂತವಾದಿಯೇ ಹೊರತು ಕಾರ್ಯಕರ್ತನಲ್ಲವೆಂದು ತನಿಖೆದಾರರು ಇದುವರೆಗೆ ಅಭಿಪ್ರಾಯಿಸಿದ್ದರು. ಆದರೆ, ಆತ ವಿವಿಧ ಸ್ಫೋಟ ಪ್ರಕರಣಗಳಲ್ಲಿ ಬಳಕೆಯಾದ ಸುಧಾರಿತ ಸ್ಫೋಟಕ ತಯಾರಿಗಾಗಿಯೇ ಇಂಜಿನಿಯರಿಂಗ್ ಪದವೀಧರ ಸಂದೀಪ್ ಡಾಂಗೆ ಹಾಗೂ ಇಲೆಕ್ಟ್ರಿಶಿಯನ್ ರಾಮ್ಜಿ ಕಲ್ಸಂಗ್ರ ಎಂಬವರೊಂದಿಗೆ ಕೈಜೋಡಿಸಿದ್ದನೆಂದು ಅಧಿಕೃತ ಎನ್‌ಐಎಮೂಲಗಳು ಹೇಳಿವೆ.

ಶಾಂತಿ ಮಾತುಕತೆಗಳ ಪುನಾರಂಭಕ್ಕಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಖುರ್ಶಿದ್ ಮುಹಮ್ಮದ್ ಕಸೂರಿ ದಿಲ್ಲಿಗೆ ಭೇಟಿ ನೀಡಲಿದ್ದ ಮುನ್ನಾದಿನ, 2007ರ ಫೆ. 18ರ ಮಧ್ಯರಾತ್ರಿಯ ಸುಮಾರಿಗೆ ದಿಲ್ಲಿ-ಲಾಹೋರ್ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಬಾಂಬ್‌ಗಳನ್ನು ಅಳವಡಿಸಲಾಗಿತ್ತೆಂದು ಅವು ತಿಳಿಸಿವೆ. ಹರ್ಯಾಣದ ಪಾಣಿಪತ್ ಸಮೀಪದ ದಿವಾನಾ ನಿಲ್ದಾಣವನ್ನು ರೈಲು ದಾಟಿದೊಡನೆ ಭಾರತದ ನೆಲದಲ್ಲೇ ರೈಲಿನಲ್ಲಿ ಸ್ಫೋಟ ಸಂಭವಿಸಿತ್ತು. ಪಾಕಿಸ್ತಾನಿ ನಾಗರಿಕರು, ಕೆಲವು ಭಾರತೀಯರು ಹಾಗೂ ರೈಲಿನ ಭದ್ರತಾ ಜವಾನರು ಸೇರಿದಂತೆ 68 ಮಂದಿ ಸಾವಿಗೀಡಾಗಿದ್ದರು.

ಬಾಂಬ್‌ಗಳಲ್ಲಿ ಉಪಯೋಗಿಸ ಲಾಗಿದ್ದ ಸ್ಫೋಟಕ ಹಾಗೂ ಬಾಂಬ್‌ಗಳ ಸ್ವರೂಪ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಾಧುನಿಕವಾಗಿತ್ತೆನ್ನಲಾಗಿದೆ.
ಬಾಂಬ್ ತಯಾರಕರು ಇಲೆಕ್ಟ್ರಾನಿಕ್ಸ್‌ನಲ್ಲಿ ಪರಿಣತರೆಂಬುದು ಸ್ಪಷ್ಟವಾಗಿತ್ತು. ಇದಕ್ಕೆ ಆರೆಸ್ಸೆಸ್ ಜಿಲ್ಲಾ ಪದಾಧಿಕಾರಿ ಡಾಂಗೆ ಇಂದೋರ್ ನಿವಾಸಿ ಕಲ್ಸಂಗ್ರನಿಗೆ ನೆರವು ನೀಡಿದ್ದಾನೆಂದು ಎನ್‌ಐಎ ಶಂಕಿಸಿದೆ. ಇಂದೋರ್‌ನಿಂದ ಬಾಂಬ್‌ಗಳನ್ನು ಸೂಟ್‌ಕೇಸ್‌ನಲ್ಲಿ ತರಲಾಗಿತೆಂದು ಹೇಳಲಾಗಿದೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಆರೋಪದಲ್ಲಿ ಬಂಧಿತನಾದ ಅಸೀಮಾನಂದ ಅಜ್ಮೀರ್ ಸ್ಫೋಟ, ಮಾಲೆಗಾಂವ್ ಹಾಗೂ ಮೋಡಸ ಸ್ಫೋಟಗಳಲ್ಲೂ ಪಾತ್ರ ಹೊಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ