ಬುಧವಾರ, ಫೆಬ್ರವರಿ 09, 2011

ತಪ್ಪು ಮಾಡದಿದ್ದರೆ ಸಿಬಿಐ ತನಿಖೆಗೆ ಒಪ್ಪಿಸಲು ಭಯ ಏಕೆ?


  • ಬೆಂಗಳೂರು : ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ ತಪ್ಪು ಮಾಡದಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಭಯವೇಕೆ ಎಂದು ಸರ್ಕಾರವನ್ನು ಹೈಕೋರ್ಟ್‌ ಭಾಗೀಯ ಪೀಠ ಪ್ರಶ್ನಿಸಿದೆ.

    ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಕ್ರಮ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

    ಯಾವುದೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಅಧಿಕಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಇಲ್ಲ. ಈ ಆಯೋಗವನ್ನು ಸರ್ಕಾರ ನೇಮಿಸಿದ್ದು, ಯಾವುದೇ ವಿಷಯ ಕುರಿತು ಶಿಫಾರಸು ಮಾಡಬಹುದಷ್ಟೇ. ಸರ್ಕಾರ ಆಯೋಗದ ಶಿಫಾರಸ್ಸನ್ನು ಒಪ್ಪಬಹುದು ಇಲ್ಲವೇ ತಿರಸ್ಕರಿಸಲೂಬಹುದು. ಹಾಲಪ್ಪ ಪ್ರಕರಣ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಸಿಬಿಐ ತನಿಖೆಗೆ ಎಸ್‌ಎಚ್‌ಆರ್‌ಸಿ ಆದೇಶ ನೀಡಿರುವುದು ಸರಿಯಲ್ಲ ಎಂದು ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

    ರಾಜ್ಯ ಸರ್ಕಾರದ ಹಿಡಿತದಲ್ಲಿರುವ ತನಿಖಾ ಏಜೆನ್ಸಿಗಳಿಂದ ತನಿಖೆ ನಡೆದರೆ ನೊಂದವರಿಗೆ ಸೂಕ್ತ ನ್ಯಾಯ ಸಿಗುವ ಭರವಸೆ ಇಲ್ಲ. ಈಗಿರುವಾಗ ಸಿಬಿಐ ತನಿಖೆಯೇ ಸೂಕ್ತ ಎಂದು ಭಾವಿಸಲಾಗಿದೆ ಎಂದು ಮಾನವ ಹಕ್ಕುಗಳ ಪರ ವಕೀಲರು ವಾದಿಸಿದರು.

    ಸಿಬಿಐ ತನಿಖೆಗೆ ಆದೇಶಿಸುವ ಅಧಿಕಾರ ಮಾನವ ಹಕ್ಕುಗಳ ಆಯೋಗಕ್ಕೆ ಇಲ್ಲ ಎಂದ ಮೇಲೆ, ಅದನ್ನು ಸರ್ಕಾರವೇ ತಿರಸ್ಕರಿಸಬಹುದಿತ್ತು. ಅದನ್ನು ಬಿಟ್ಟು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಮೇಯವಿತ್ತೆ ಎಂದು ಮುಖ್ಯ ನ್ಯಾ | ಜೆ.ಎಸ್‌. ಖೇಹರ್‌ ಪ್ರಶ್ನಿಸಿದರು.

    ಅಷ್ಟಕ್ಕೂ ಹಾಲಪ್ಪ ಅವರು ತಪ್ಪು ಮಾಡಿಲ್ಲವೆಂದರೆ ಸಿಬಿಐ ತನಿಖೆಗೆ ಏಕೆ? ಭಯಪಡಬೇಕು. ಈ ಕುರಿತು ಸ್ಪಷ್ಟ ನಿಲುವು ತಿಳಿಸುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ನಿರ್ದೇಶನ ನೀಡಿ ವಿಚಾರಣೆಯನ್ನು ಮಾ.8ಕ್ಕೆ ಮುಂದೂಡಿತು.

    2010ರ ಮೇ 2 ರಂದು ಹಾರತಾಳು ಹಾಲಪ್ಪ ವಿರುದ್ಧ ಶಿವಮೊಗ್ಗ ನಿವಾಸಿ ವೆಂಕಟೇಶಮೂರ್ತಿ ಹಾಗೂ ಆತನ ಪತ್ನಿ ಚಂದ್ರವತಿ ಶಿವಮೊಗ್ಗದಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಹಾಲಪ್ಪ ಅವರು ಚಂದ್ರವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕುರಿತು ಸಿಐಡಿ ತನಿಖೆ ನಡೆಸುವುದಾಗಿ ಸರ್ಕಾರ ಮೇ 3 ರಂದು ಪ್ರಕಟಿಸಿತ್ತು. ಸಿಐಡಿ ಪೊಲೀಸರು ಹಾಲಪ್ಪ ಅವರನ್ನು ಬಂಧಿಸಿದ್ದರು. ಹೈಕೋರ್ಟ್‌ ಅವರಿಗೆ ಷರತ್ತು ಬದ್ದ ಜಾಮೀನು ನೀಡಿದೆ. ಜತೆಗೆ ಡಿಎನ್‌ಎ ಪರೀಕ್ಷೆಯ ವರದಿಯೂ ಬಂದಿದೆ. ತನಿಖೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಸರ್ಕಾರದ ಪರ ವಕೀಲರು ಸ್ಪಷ್ಟಪಡಿಸಿದರು.

    ಅತ್ಯಾಚಾರ ಪ್ರಕರಣವೂ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ಎಸ್‌ಎಚ್‌ಆರ್‌ಸಿ ಅಧ್ಯಕ್ಷ ನ್ಯಾ | ಎಸ್‌. ಆರ್‌. ನಾಯಕ್‌, ಚಂದ್ರವತಿ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಲು ಆದೇಶಿಸಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ