ಭಾನುವಾರ, ಜನವರಿ 02, 2011

ಭಾರದ್ವಾಜ್ ಪಾಕಿಸ್ತಾನದ ರಾಜ್ಯಪಾಲರೇ?: ಹಿಂದೂ ಸಮಾಜೋತ್ಸವದಲ್ಲಿ ಪ್ರವೀಣ್ ತೊಗಾಡಿಯಾ

ಮಂಗಳೂರು, ಜ.2: ಕರ್ನಾಟಕ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯಪಾಲರ ಅನುಮತಿಗಾಗಿ ಕಾಯುತ್ತಿದೆ. ಆದರೆ, ಇಲ್ಲಿನ ರಾಜ್ಯಪಾಲರು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಅವರು ಅದನ್ನು ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಭಾರದ್ವಾಜ್ ಕರ್ನಾಟಕದ ರಾಜ್ಯಪಾಲರೇ? ಪಾಕಿಸ್ತಾನದ ರಾಜ್ಯಪಾಲರೇ? ಎಂಬ ಸಂಶಯ ಉಂಟಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣ್ ತೊಗಾಡಿಯಾ ರಾಜ್ಯಪಾಲರ ವಿರುದ್ಧ ಕಿಡಿ ಕಾರಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಶ್ರೀ ಹನುಮದ್ ಶಕ್ತಿ ಜಾಗರಣಾ ಸಮಿತಿ ಇಂದು ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪ್ರಚೋದನೆ
ಪ್ರಚೋದನಕಾರಿ ಭಾಷಣಗಳ ಕಾರಣದಿಂದ ವಿವಾದಾಸ್ಪದ ವ್ಯಕ್ತಿಯಾಗಿದ್ದ ಪ್ರವೀಣ್ ತೊಗಾಡಿಯಾ ಮಂಗಳೂರಿ ನಲ್ಲೂ ಅದನ್ನು ಮುಂದುವರಿಸಿದ್ದಾರೆ.
ರಾಮಮಂದಿರ ನಿರ್ಮಾಣ ಹಾಗೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ವಿಚಾರವನ್ನು ಉಲ್ಲೇಖಿಸುತ್ತಾ, ‘‘ಮುಸ್ಲಿಮರು ಮಿತ್ರರೋ... ಶತ್ರುಗಳೋ...?’ ಎಂದು ನೆರೆದ ಜನರನ್ನು ಪ್ರಚೋದಿಸಿದ ಅವರು, ಜನರಿಂದ ‘ಶತ್ರುಗಳು’ ಎಂಬ ಉತ್ತರ ಪಡೆದರು. ಈ ರೀತಿ ಹಲವು ಪ್ರಶ್ನೆಗಳನ್ನು ಎಸೆಯುತ್ತಾ, ಮುಸ್ಲಿಮರನ್ನು ಹಿಂದೂಗಳ ಶತ್ರುಗಳು ಎಂದು ಸಾರ್ವಜನಿಕವಾಗಿ ಘೋಷಿಸಿದರು.

‘ಅಯೋಧ್ಯೆ ಯಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತಾರಂತೆ. ಸಾಧ್ಯವಿದ್ದರೆ ಮಕ್ಕಾದಲ್ಲಿ ಮಂದಿರ ನಿರ್ಮಿಸಲಿ’ ಎಂದು ಸವಾಲೆಸೆದರು. ‘ರಾಹುಲ್ ಗಾಂಧಿ ಸೈನ್ಯ ಪಾಕಿಸ್ತಾನದ ಜಿನ್ನಾನ ಕೆಲಸ ಮಾಡ್ತಾ ಇದೆ ಎಂದೂ ಟೀಕಿಸಿದರು

 ಅಯೋಧ್ಯೆಯ ಎಲ್ಲ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಒಪ್ಪಿಸಬೇಕು. ರಾಮಮಂದಿರಕ್ಕೆ 35 ಅಡಿ ಜಾಗ ಮಾತ್ರ ನೀಡುತ್ತಿದ್ದಾರೆ. ಇದು ಸಾಲದು. ರಾಷ್ಟ್ರಪತಿಯ ಮನೆ 50 ಸಾವಿರ ಅಡಿ ಜಾಗದಲ್ಲಿದೆ. ಆದ್ದರಿಂದ ಅಯೋಧ್ಯೆಯ 67 ಎಕ್ರೆ ಜಾಗದಲ್ಲೂ ರಾಮಮಂದಿರ ನಿರ್ಮಾಣ ಮಾಡಬೇಕು. ಅಲ್ಲಿ ಯಾವುದೇ ಕಾರಣಕ್ಕೂ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಅಯೋಧ್ಯೆ ಜಾಗ ಹನುಮದ್ ಶಕ್ತಿ ಜಾಗರಣ ಸಮಿತಿಗೆ ಸೇರಿದ್ದೆಂದು ಲಕ್ನೋ ಹೈಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಲಾಗುವುದು ಎಂದು ತೊಗಾಡಿಯಾ ಪ್ರತಿಪಾದಿಸಿದರು.

ಹಿಂದೂ ಸಮಾಜದಲ್ಲಿನ ಅಸ್ಪಶತೆ ಹೋಗಲಾಡಿಸುವುದರ ಜೊತೆಗೆ ಜಾತಿ ಸಾಮರಸ್ಯದ ಮೂಲಕ ಸಂಘಟಿತ ಹಿಂದೂ ಸಮಾಜಕ್ಕೆ ಸಂತರು ಶ್ರಮಿಸುವಂತೆ ಅವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಪಿ.ದಯಾನಂದ ಪೈ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.

ವೇದಿಕೆಯಲ್ಲಿ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಪೇಜಾವರ ಶ್ರೀ, ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಹನುಮದ್ ಶಕ್ತಿ ಜಾಗರಣ ಸಮಿತಿಯ ಅಧ್ಯಕ್ಷ ರವಿಶಂಕರ್ ಮಿಜಾರ್, ವಿಹಿಂಪ ಕೇಂದ್ರೀಯ ಉಪಾಧ್ಯಕ್ಷೆ ರಾಣಿ ಚಂದ್ರ ಕಾಂತಾ, ವಿಭಾಗೀಯ ಅಧ್ಯಕ್ಷ ಎಂ.ಬಿ. ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಸಮಾಜೋತ್ಸವಕ್ಕೆ ಮುಂಚೆ ಸಂಜೆ 4 ಗಂಟೆಗೆ ನಗರದ ಜ್ಯೋತಿ ವೃತ್ತದಿಂದ ವಿವಿಧ ಮಠಗಳ ಸ್ವಾಮೀಜಿಗಳ ಶಂಖನಾದಗಳೊಂದಿಗೆ ಮೆರವಣಿಗೆ ನಡೆಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ