ಭಾನುವಾರ, ಡಿಸೆಂಬರ್ 12, 2010

ಕೋಮುವಾದಿ ಪೊಲೀಸರ ಬದಲಾವಣೆಗೆ ಚಳವಳಿಯಾಗಲಿ: ಮಾನವ ಹಕ್ಕು ಹೋರಾಟಗಾರ್ತಿ ಪ್ರೊ.ರೀಟಾ ನೊರೊನ್ಹ ಸಲಹೆ

ಮಂಗಳೂರು, ಡಿ.12: ಪೊಲೀಸ್ ದೌರ್ಜನ್ಯದ ಬಗ್ಗೆ ಕಳೆದ ಎರಡು ದಿನದಿಂದ ಉಳ್ಳಾಲ ಪರಿಸರದಿಂದಲೇ ಅಧಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕೋಮುವಾದಿ ಪೊಲೀಸರ ಬದಲಾವಣೆಗೆ ಉಳ್ಳಾಲದಿಂದ ಚಳವಳಿ ಆರಂಭಿಸಬೇಕು ಎಂದು ಹಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ, ರೋಶನಿ ನಿಲಯದ ಪ್ರಾಧ್ಯಾಪಕಿ ಹಾಗೂ ಸಾರ್ವಜನಿಕ ತನಿಖಾ ತಂಡದ ಸದಸ್ಯೆ ಪ್ರೊ.ರೀಟಾ ನೊರೊನ್ಹ ಸಲಹೆ ನೀಡಿದ್ದಾರೆ.

ಪಿಯುಸಿಎಲ್ ದ.ಕ. ಮತ್ತು ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್ ಇವುಗಳ ಜಂಟಿ ಆಶ್ರಯದಲ್ಲಿ ನಗರದ ಮಿಲಾಗ್ರಿಸ್ ಕಾಲೇಜಿನ ಸಭಾಂಗಣದಲ್ಲಿ ರವಿವಾರ ನಡೆದ ಕರಾವಳಿ ಜಿಲ್ಲೆಗಳಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯ ಪ್ರಕರಣಗಳ ‘ಜನತಾ ನ್ಯಾಯಾಲಯ’ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ಇಂದಿನ ಜನತಾ ನ್ಯಾಯಾಲಯಕ್ಕೆ ಬಂದ 15 ಪ್ರಕರಣಗಳ ಪೈಕಿ ಉಳ್ಳಾಲದಿಂದ ಬಂದ ದೂರುಗಳೇ ಅಧಿಕ. ಬಹುತೇಕ ದೂರುಗಳು ಕೋಮುವಾದಿ ಪೊಲೀಸರ ಬಗ್ಗೆಯಾಗಿದ್ದು, ಅವರ ಬದಲಾವಣೆ ಆಗಬೇಕಾಗಿದೆ ಇದಕ್ಕೆ ಹೋರಾಟದ ಅಗತ್ಯವಿದೆ ಎಂದು ರೀಟಾ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ನ್ಯಾಯಾಧೀಶ ಎಂ.ಎಫ್.ಸಲ್ದಾನ ‘ಮಾನವ ಹಕ್ಕುಗಳ ದಮನ ಮತ್ತು ಪೊಲೀಸ್ ದೌರ್ಜನ್ಯಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಖಾಸಗಿ ತನಿಖಾ ತಂಡ ಕಾರ್ಯಪ್ರವೃತ್ತರಾಗಬೇಕು’ ಎಂದರು.

ವೇದಿಕೆಯಲ್ಲಿ ಮಾನವ ಹಕ್ಕುಗಳ ಹಿರಿಯ ಹೋರಾಟಗಾರ ನಗರಿ ಬಾಬಯ್ಯ, ನ್ಯಾಯವಾದಿ ಹಾಗೂ ಡೀಡ್ಸ್‌ನ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಪಿಯುಸಿಎಲ್ ರಾಜ್ಯ ಉಪಾಧ್ಯಕ್ಷೆ ರತಿದೇವಿ, ಕೆಥೊಲಿಕ್ ಸಭಾದ ಉಪಾಧ್ಯಕ್ಷ ನೈಜಲ್ ಪಿರೇರಾ, ಪಿಯುಸಿಎಲ್‌ನ ಪಿ.ಬಿ.ಡೇಸಾ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ