ಭಾನುವಾರ, ಜನವರಿ 16, 2011

ರಸ್ತ್ರೀ ವ್ಯಾಮೋಹ ಕೊಲೆಗೆ ಕಾರಣ ಕಸ್ಬಾ-ಬೆಂಗ್ರೆ ಕೊಲೆ ರಹಸ್ಯ ಬಹಿರಂಗ

ಮಂಗಳೂರು: ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಗಿದ್ದ ಯುವಕ ಆಕೆಯ ಗಂಡನಿಂದ ತನಗೆ ತೊಂದರೆಯಾಗುತ್ತದೆ ಎಂದು ಅರಿತು ಕೊಲೆ ಮಾಡುವಂತಹ ನೀಚ ಕೃತ್ಯ ಮಾಡಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಇದು ಕಳೆದ ವಾರ ಕಸ್ಬಾ-ಬೆಂಗ್ರೆಯಲ್ಲಿ ನಡೆದ ಯುವಕನ ಕೊಲೆಯ ಹಿಂದಿನ ರಹಸ್ಯ.
ಕಳೆದ ಅದಿತ್ಯವಾರದಂದು ಸಂಜೆ ಕಸ್ಬಾ-ಬೆಂಗ್ರೆ ಕಾಡಿಗೆ ಕಟ್ಟಿಗೆ ತರಲು ಹೋಗಿದ್ದ ಮಹಿಳೆಯರು ಅಲ್ಲಿ ರಕ್ತದ ಮಡುವಿನಲ್ಲಿ ಶವವೊಂದು ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ನಡೆಸಿದಾಗ ಶವವು ಹಳಿಯಾಲ ನಿವಾಸಿ ಮಲ್ಲೇಶ ಮಲ್ಲಪ್ಪ ಹೊನ್ನಳ್ಳಿ ಎಂದು ಗುರುತು ಪತ್ತೆಯಾಗಿದ್ದು ಆತ ಪಣಂಬೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿತ್ತು. ಶವದ ಬಳಿ ಬಿಯರ್ ಬಾಟ್ಲಿ, ಕೋಳಿ ಮಾಂಸದ ಸುಕ್ಕ ಪತ್ತೆಯಾಗಿದ್ದು ಇಬ್ಬರು ಸ್ನೇಹಿತರ ನಡುವೆ ನಡೆದ ಕದನಕ್ಕೆ ಮಲ್ಲೇಶ ಬಲಿಯಾಗಿದ್ದಾನೆಂಬ ಸಂಶಯ ಪೊಲೀಸರಲ್ಲಿ ಮೂಡಿತ್ತು.
ಆರೋಪಿಯ ಜಾಡನ್ನು ಅರಸುತ್ತಾ ಹೊರಟ ಪಣಂಬೂರು ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜಾ ಮತ್ತು ತಂಡಕ್ಕೆ ಕೊಲೆಗೀಡಾಗಿದ್ದ ಮಲ್ಲೇಶನ ತಮ್ಮ ಶರಣಪ್ಪ ಎಂಬಾತ ಆರೋಪಿಯ ಬಗ್ಗೆ ಸುಳಿವು ನೀಡಿದ್ದನು. ಬೈಂದೂರು, ಉಡುಪಿ, ಕುಂದಾಪುರಗಳಲ್ಲಿ ಸಂಚರಿಸಿದ ಪೊಲೀಸರು ನಿನ್ನೆ ಬೆಳಿಗ್ಗೆ ಮಂಗಳೂರು ಬಂದರ್‌ನಲ್ಲಿ ಮಲ್ಲಪ್ಪ ಬಸಪ್ಪ ಐಹೊಳೆ ಎಂಬಾತನನ್ನು ಬಂಧಿಸಿ ನಾಲ್ಕೇಟು ಬಿಗಿದಾಗ ಆರೋಪಿ ತಾನೇ ಕೊಲೆ ಮಾಡಿ ರುವ ಮತ್ತು ಅದರ ಹಿಂದಿನ ರಹಸ್ಯವನ್ನು ಬಹಿರಂಗಗೊಳಿಸಿದ್ದಾನೆ.
ಮೂಲತಃ ಹಳಿಯಾಲದ ನಿವಾಸಿಯಾಗಿರುವ ಮಲ್ಲೇಶನಿಗೆ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿದ್ದು ನಂತರ ಉದ್ಯೋಗವನ್ನು ಅರಸುತ್ತಾ ಮಂಗಳೂರಿಗೆ ಬಂದು ಪಣಂಬೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಈ ಮಧ್ಯೆ ಅದೇ ಊರಿನ ಮಲ್ಲಪ್ಪ ಬಸಪ್ಪ ಎಂಬಾತನ ಕಣ್ಣು ಮಲ್ಲೇಶನ ಹೆಂಡತಿ ಮೇಲೆ ಬಿದ್ದಿದ್ದು ಆತನ ಕಣ್ಣೋಟಕ್ಕೆ ಆಕೆಯೂ ಸೋತಿದ್ದಳು. ಇದನ್ನು ಸಮರ್ಥವಾಗಿ ಬಳಸಿಕೊಂಡ ಬಸಪ್ಪ, ಮಲ್ಲೇಶ ಮಂಗಳೂರಿನಲ್ಲಿದ್ದ ಸಂದರ್ಭವನ್ನು ಕಾದು ಹಳಿಯಾಲಕ್ಕೆ ಹೋಗಿ ಆತನ ಹೆಂಡತಿ ಜೊತೆ ಚಕ್ಕಂದ ಆಡುತ್ತಿದ್ದನೆನ್ನಲಾಗಿದೆ.
ಈ ವಿಷಯ ಅದ್ಹೇಗೋ ಮಲ್ಲೇಶನಿಗೆ ತಿಳಿದು ಆತ ಎರಡು ತಿಂಗಳ ಹಿಂದೆ ಹೆಂಡತಿಯನ್ನು ಪಣಂಬೂರಿಗೆ ಕರೆಸಿದ್ದನು. ಇದರಿಂದ ರೋಸಿಹೋದ ಬಸಪ್ಪ, ತನ್ನ ಕೆಲಸಕ್ಕೆ ಅಡ್ಡಗಾಲಿಕ್ಕಿದ ಮಲ್ಲೇಶನನ್ನು ಮುಗಿಸಲು ಮನದಲ್ಲೇ ತೀರ್ಮಾನಿಸಿದ್ದರೂ ಅದನ್ನು ತೋರ್ಪಡಿಸಿರಲಿಲ್ಲ. ರಜಾ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ತಿರುಗುತ್ತಿದ್ದು ಅದೇ ರೀತಿ ಕಳೆದ ಆದಿತ್ಯವಾರದಂದು ಇಬ್ಬರೂ ಪಣಂಬೂರು ಬೀಚಿಗೆ ಬಂದಿದ್ದರು. ಈ ಬಾರಿ ಮಲ್ಲೇಶನನ್ನು ಮುಗಿಸಬೇಕೆಂದೇ ತೀರ್ಮಾನಿಸಿದ್ದ ಬಸಪ್ಪ ಬಿಯರ್ ಮತ್ತು ಕೋಳಿ ಸುಕ್ಕದೊಂದಿಗೆ ಭರ್ಜರಿ ಪಾರ್ಟಿ ಏರ್ಪಡಿಸಿ ಪೂರ್ವ ನಿರ್ಧಾರದಂತೆ ಚೂರಿಯಿಂದ ಕುತ್ತಿಗೆ ಸೀಳಿ ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ