‘‘ನನ್ನ ಸಹೋದರಿಯನ್ನು ಭಯೋತ್ಪಾದಕಿ ಎಂದು ಚಿತ್ರಿಸುವಂತಹ ಯಾವ ತಪ್ಪು ಆಕೆ ಮಾಡಿದ್ದಳು?’’ ಎಂದು ಗುಜರಾತ್ನಲ್ಲಿ ಹತ್ಯೆಗೀಡಾಗಿರುವ ಇಶ್ರತ್ ಜಹಾನ್ಳ ತಂಗಿ ಮುಸ್ಸಾರತ್ ಜಹಾನ್ ಪ್ರಶ್ನಿಸುತ್ತಾಳೆ. ‘ಸ್ವತಂತ್ರ ತನಿಖೆಯೊಂದರ ಪ್ರಕಾರ, ಇಶ್ರತ್ ಜಹಾನ್ಳನ್ನು ನಕಲಿ ಎನ್ಕೌಂಟರ್ ಮೂಲಕ ಹತ್ಯೆ ಮಾಡಲಾಗಿದೆ’ ಎಂಬ ಆಕೆಯ ಸಹೋದರಿಯ ಹೇಳಿಕೆಯು ಶನಿವಾರ ಬಿಡುಗಡೆಗೊಂಡಿರುವ ‘ಭಾರತದಲ್ಲಿ ಇಂದು ಮುಸ್ಲಿಮನಾಗಿರುವುದೆಂದರೆ ಏನರ್ಥ’? ಎಂಬ ಪುಸ್ತಕದಲ್ಲಿ ದಾಖಲಾಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಹೇಶ್ ಭಟ್, ಶಾಸಕ ಜಿತೇಂದ್ರ ಆವದ್ ಮತ್ತಿತರರು ಉಪಸ್ಥಿತರಿದ್ದರು.
ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ಭಾರತೀಯ ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಕುರಿತ ಜನರ ಟ್ರಿಬ್ಯೂನಲ್ನ ವರದಿಯನ್ನು ಈ ಪುಸ್ತಕ ಒಳಗೊಂಡಿದೆ. ಪ್ರಸ್ತುತ ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿಗಳ ಕುರಿತ ಎಎನ್ಎಚ್ಎಡಿ (ಆ್ಯಕ್ಟ್ ನೌ ಫಾರ್ ಹಾರ್ಮನಿ ಆ್ಯಂಡ್ ಡೆಮಾಕ್ರಸಿ)ಯ ರಾಷ್ಟ್ರೀಯ ಸಮಾವೇಶದ ವರದಿಯೂ ಇದರಲ್ಲಿದೆ. ಮಾನವ ಹಕ್ಕುಗಳ ಕಾನೂನು ಜಾಲ ಮತ್ತು ಸಿಯಾಸತ್ ಎಂಬ ಎನ್ಜಿಒಗಳು ಟ್ರಿಬ್ಯೂನಲ್ಗಳನ್ನು ಸಂಘಟಿಸಿದ್ದವು.
2006ರ ಮಾಲೆಗಾಂವ್ ಸ್ಫೋಟದಲ್ಲಿ ಅಮಾಯಕರೆಂದು ಸ್ಪಷ್ಟವಾಗಿದ್ದರೂ, ಆರೋಪಿಗಳಿಗೆ ಇನ್ನೂ ಜಾಮೀನು ನಿರಾಕರಿಸಲಾಗುತ್ತಿರುವುದು ಪ್ರಸ್ತುತ ಗಂಭೀರ ವಿಷಯವಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಎನ್ಎಚ್ಎಡಿಯ ಶಬ್ನಂ ಹಾಶ್ಮಿ ಹೇಳಿದ್ದಾರೆ. ಮಾಲೆಗಾಂವ್ ನಗರ ಸ್ವಾತಂತ್ರ ಪೂರ್ವದಿಂದಲೂ ಜಾತ್ಯತೀತವಾಗಿತ್ತು ಎಂದು ಅಲ್ಲಿನ ವೌಲಾನ ಅಬ್ದುಲ್ ಹಮೀದ್ ಅಝ್ಅರಿ ತಿಳಿಸಿದ್ದಾರೆ. ಮುಸ್ಲಿಮರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸರಕಾರ ಸೂಕ್ಷ್ಮತೆಯನ್ನು ಹೊಂದಿಲ್ಲ ಮತ್ತು ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಧೈರ್ಯ ತೋರುತ್ತಿಲ್ಲ ಎಂದು ಅವರು ಆಪಾದಿಸಿದರು. ತಪ್ಪು ಪ್ರಕರಣಗಳಲ್ಲಿ ಕೆಲವು ಜನರನ್ನು ಬಂಧಿಸಿದ್ದ ಆಂಧ್ರಪ್ರದೇಶ ಸರಕಾರ ಅವರಲ್ಲಿ ಕ್ಷಮೆ ಯಾಚಿಸಿದೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಒದಗಿಸಿದೆ ಎಂದರು. ತಪ್ಪಿತಸ್ಥರನ್ನು ಶಿಕ್ಷಿಸಬೇಕು ಮತ್ತು ಮುಸ್ಲಿಂ ಸಮುದಾಯದ ಮೇಲಿರುವ ಭಯೋತ್ಪಾದನೆಯ ಕಳಂಕವನ್ನು ತೆಗೆಯಬೇಕು ಎಂದು ಅಝ್ಅರಿ ಹೇಳಿದ್ದಾರೆ. ದೇಶಾದ್ಯಂತ ಭಯೋತ್ಪಾದನೆಯ ಹೆಸರಲ್ಲಿ ಕಿರುಕುಳಕ್ಕೊಳಗಾಗಿರುವ ಕುಟುಂಬಗಳ ಸದಸ್ಯರ ಹೇಳಿಕೆಗಳನ್ನು ಈ ಪುಸ್ತಕ ಒಳಗೊಂಡಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ