ಶನಿವಾರ, ಜನವರಿ 29, 2011

ಮುಸ್ಲಿಮರೇನು ಎರಡನೆ ದರ್ಜೆ ಪ್ರಜೆಗಳೇ? : ಗೌಡ್ರು

HD Devegowda on BJP Ekta Yatraಬೆಂಗಳೂರು, ಜ.28: ಬಿಜೆಪಿ ತನ್ನ ‘ನಕಲಿ’ ದೇಶಭಕ್ತಿಯ ಮೂಲಕ ಮುಸ್ಲಿಮರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಮಾಡಲು ಕುತಂತ್ರ ರೂಪಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆರೋಪ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಆಯೋ ಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಲಾಲ್‌ಚೌಕ್ ನಲ್ಲಿ ತಿರಂಗ ಧ್ವಜಾರೋಹಣದ ನೆಪದಲ್ಲಿ ಬಿಜೆಪಿ ಕೈಗೊಂಡಿರುವ ತಿರಂಗಯಾತ್ರೆ ದೇಶ ವಿಭಜನೆ ಮಾಡುವಂತಹ ಯತ್ನವಾಗಿದೆ ಎಂದರು.

ಬಿಜೆಪಿ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿಲ್ಲ ಎಂಬುದಕ್ಕೆ ಪಕ್ಷದ ರಾಷ್ಟ್ರೀಯ ಮುಖಂಡರು ಉತ್ತರಿಸಬೇಕು. ರಾಜ್ಯ ಸರಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳು ಕಳೆದರೂ ಲೋಕ ಸೇವಾ ಆಯೋಗಕ್ಕೆ ಒಬ್ಬೇ ಒಬ್ಬ ಮುಸ್ಲಿಮ್ ಸಮುದಾಯದವನನ್ನು ನೇಮಿಸಲಿಲ್ಲವೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ಲಜ್ಜೆಗೆಟ್ಟ ಸಿಎಂ: ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಎಫ್‌ಐಆರ್ ಹಾಕುವುದಷ್ಟೇ ಬಾಕಿ ಇದೆ. ಆದರೂ, ಅವರು ರಾಜೀನಾಮೆ ನೀಡುವುದಿಲ್ಲ ಎಂದರೆ ಅವರ ಭಂಡತನ ಎಷ್ಟಿದೆ ನೋಡಿ ಎಂದು ಟೀಕಿಸಿದ ಅವರು, ರಾಜ್ಯಪಾಲರ ಚಹಾ ಕೂಟಕ್ಕೆ ಗೈರುಹಾಜರಾಗಿರುವ ಬಿಜೆಪಿ ಸರಕಾರದ ಬಗ್ಗೆ ಇನ್ನೇನು ಹೇಳಲಿ ಎಂದು ವ್ಯಂಗ್ಯವಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ