ಸೋಮವಾರ, ಜನವರಿ 03, 2011

ಮತ ಎಣಿಕೆಗೆ ದ.ಕ. ಜಿಲ್ಲಾಡಳಿತ ಸಜ್ಜು

ಮಂಗಳೂರು, ಜ.3: ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಡಿ.31ರಂದು ನಡೆದ ಚುನಾವಣೆಯ ಮತ ಎಣಿಕೆ ಜನವರಿ 4 ರಂದು ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದ್ದು, ಸುಸೂತ್ರವಾಗಿ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಮಂಗಳೂರು ತಾಲೂಕಿನ ಮತ ಎಣಿಕೆಯನ್ನು ಸಂತ ರೊಜಾರಿಯೋ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ, ಬಂಟ್ವಾಳ ತಾಲೂಕಿನ ಮತ ಎಣಿಕೆಯನ್ನು ಮೊಡಂಕಾಪು ಇನ್‌ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ, ಬೆಳ್ತಂಗಡಿಯ ಮತ ಎಣಿಕೆಯನ್ನು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ, ಪುತ್ತೂರು ತಾಲೂಕಿನ ಮತ ಎಣಿಕೆಯನ್ನು ಪುತ್ತೂರು ದರ್ಭೆಯ ಸಂತ ಫಿಲೋಮಿನಾ ಕಾಲೇಜಿನಲ್ಲಿ, ಸುಳ್ಯ ತಾಲೂಕಿನ ಮತ ಎಣಿಕೆಯನ್ನು ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ 33 ಮೇಲ್ವಿಚಾರಕರ ನೇತೃತ್ವದಲ್ಲಿ 4 ಕೊಠಡಿಗಳಲ್ಲಿ 10 ಸ್ಥಾನಗಳ ಮತ ಎಣಿಕೆ ನಡೆಯಲಿದೆ. ಬಂಟ್ವಾಳದಲ್ಲಿ 30 ಮೇಲ್ವಿಚಾರಕರ ಉಸ್ತುವಾರಿಯಲ್ಲಿ 7 ಕೊಠಡಿಗಳಲ್ಲಿ 27 ಮೇಜುಗಳು 9 ಸ್ಥಾನಗಳ ಮತ ಎಣಿಕೆಗೆ ಸಜ್ಜುಗೊಂಡಿದೆ.
ಬೆಳ್ತಂಗಡಿಯ ಒಟ್ಟು 6 ಸ್ಥಾನಗಳಿಗೆ 3 ಕೊಠಡಿಗಳಲ್ಲಿ 18 ಮೇಜುಗಳಲ್ಲಿ 20 ಮೇಲ್ವಿಚಾರಕರು ಮತ ಎಣಿಕೆ ಕಾರ್ಯಕ್ಕೆ ಸಜ್ಜಾಗಿದ್ದಾರೆ. ಪುತ್ತೂರು ಮತ ಎಣಿಕೆ ಕೇಂದ್ರದಲ್ಲಿ 20 ಮೇಲ್ವಿಚಾರಕರು 18 ಮೇಜುಗಳಲ್ಲಿ 3 ಕೊಠಡಿಗಳಲ್ಲಿ 6 ಸ್ಥಾನಗಳ ಮತ ಎಣಿಕೆ ನಡೆಸಲಿದ್ದಾರೆ. ಸುಳ್ಯದಲ್ಲಿ 4 ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಒಂದು ಕೊಠಡಿಯಲ್ಲಿ 12 ಮೇಜುಗಳನ್ನು ಇರಿಸಲಾಗಿದ್ದು 13 ಮೇಲ್ವಿಚಾರಕರು ಮತ ಎಣಿಕೆ ನೇತೃತ್ವ ವಹಿಸುವರು. ಇದೇ ಮಾದರಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್‌ನ 37 ಸ್ಥಾನಗಳಿಗೆ 6 ಕೊಠಡಿಗಳಲ್ಲಿ 41 ಮೇಲ್ವಿಚಾರಕರ ನೇತೃತ್ವದಲ್ಲಿ 37 ಮೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. ಬಂಟ್ವಾಳದ 33 ಸ್ಥಾನಗಳಿಗೆ 5 ಕೊಠಡಿಗಳಲ್ಲಿ 33 ಮೇಜುಗಳಲ್ಲಿ 36 ಮೇಲ್ವಿಚಾರಕರು ಮತ ಎಣಿಕೆ ನಡೆಸುವರು. ಬೆಳ್ತಂಗಡಿಯ 24 ಸ್ಥಾನಗಳಿಗೆ 4 ಕೊಠಡಿಗಳಲ್ಲಿ 26 ಮೇಲ್ವಿಚಾರಕರು, ಪುತ್ತೂರಿನ 22 ಸ್ಥಾನಗಳಿಗೆ 4 ಕೊಠಡಿಗಳಲ್ಲಿ, 22 ಮೇಜುಗಳಂತೆ 24 ಮೇಲ್ವಿಚಾರಕರು, ಸುಳ್ಯದ 13 ಸ್ಥಾನಗಳಿಗೆ 2 ಕೊಠಡಿಗಳಲ್ಲಿ 13 ಮೇಜುಗಳಲ್ಲಿ 14 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ.
ಜಿಲ್ಲೆಯ ಎಲ್ಲ ತಹಶೀಲ್ದಾರರು ಆಯಾಯ ಮತ ಎಣಿಕೆ ಕೇಂದ್ರದಲ್ಲಿ ತಾಲೂಕು ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವರು. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರತೀ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ....
ಮತ ಎಣಿಕೆ ಕೇಂದ್ರದ ಪ್ರಥಮ ಗೇಟಿನಲ್ಲಿ ಅಧಿಕೃತ ಅನುಮತಿ ಪತ್ರ ಹೊಂದಿದವರನ್ನು ಮಾತ್ರ ಒಳ ಪ್ರವೇಶಕ್ಕೆ ಅನುಮತಿಸಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಬೀಡಿ, ಸಿಗರೇಟು, ಬೆಂಕಿ ಪೊಟ್ಟಣವನ್ನು ನಿಷೇಧಿಸಲಾಗಿದೆ.

ಅನುಮತಿ ಪತ್ರ ಹೊಂದಿರುವ ಮಾಧ್ಯಮ ಪ್ರತಿನಿದಿಗಳಿಗೆ ಮಾಧ್ಯಮ ಕೊಠಡಿಯಲ್ಲಿ ಮಾತ್ರ ಮೊಬೈಲ್ ಉಪಯೋಗಿಸಲು ಅನುಮತಿ ಇದೆ. ಮತ ಎಣಿಕೆ ಪ್ರಾರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಭಾವಚಿತ್ರ ಮತ್ತು ವಿಡಿಯೋ ರೆಕಾರ್ಡ್ ಮಾಡಲು ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ಜಿಲ್ಲಾ/ತಾಲೂಕು ಚುನಾವಣಾ ಕ್ಷೇತ್ರಗಳ ಮತ ಎಣಿಕೆ ಫಲಿತಾಂಶ ಮಾಧ್ಯಮ ಕೊಠಡಿಯಲ್ಲಿ ಆನ್‌ಲೈನ್ ಮೂಲಕ ದೊರೆಯು ವಂತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಂಟರ್‌ನೆಟ್ ಮೂಲಕ ಗೂಗಲ್ ಸ್ಪ್ರೆಡ್ ಶೀಟಿನಲ್ಲಿ ಫೀಡ್ ಮಾಡಿ 5 ಮತ ಎಣಿಕೆ ಕೇಂದ್ರಗಳಲ್ಲೂ ಪ್ರಕಟಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲೆಡೆಯ ಪ್ರತೀ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಇದರಿಂದ ತಿಳಿಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ