ಭಾನುವಾರ, ಜನವರಿ 16, 2011

ಅಧಿಕಾರದಲ್ಲಿರಲು ಯಡಿಯೂರಪ್ಪಗೆ ಹಕ್ಕಿಲ್ಲ: ಪರಮೇಶ್ವರ್

ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧವಾಗಿ ಸರಕಾರ ಉಳಿಸಿಕೊಳ್ಳಲು ಪ್ರತಿಪಕ್ಷಗಳ 15 ಶಾಸಕರನ್ನು ವಜಾಗೊಳಿಸುವಂತಹ ಕ್ರಮಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಹೊಂದಿಲ್ಲ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ತೆರಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬ್ಯಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಭಿನ್ನಮತೀಯ ಹಾಗೂ ಪಕ್ಷೇತರ 16 ಮಂದಿ ಶಾಸಕರ ವಿರುದ್ಧ ಸ್ಪೀಕರ್ ತೆಗೆದುಕೊಂಡಿರುವ ಕ್ರಮಕ್ಕೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗುವ ಆತಂಕವಿದ್ದು, ಈ ಎಲ್ಲ ಶಾಸಕರು ವಿಧಾನಸಭೆಗೆ ಮರಳಿದರೆ ಸರಕಾರ ಪತನವಾಗುವುದರಿಂದ ತಪ್ಪಿಸಿಕೊಳ್ಳಲು ಪ್ರತಿಪಕ್ಷಗಳ 15 ಶಾಸಕರನ್ನು ಸದನದಿಂದ ಹೊರಗಿಟ್ಟು ಸಂಖ್ಯಾಬಲವನ್ನು ಸರಿದೂಗಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಹೇಮಚಂದ್ರಸಾಗರ್ ಸಮಿತಿಯಿಂದ ವರದಿ ಪಡೆದು ಅಧಿವೇಶನ ಕ್ರಮಬದ್ದವಾಗಿಲ್ಲದ ವೇಳೆ ಮಂಡನೆ ಮಾಡಿ ಅಂಗೀಕರಿಸಲಾಗಿದೆ.

ಸದನದ ಅರ್ಧಭಾಗ ಶಾಸಕರು ಹೊರಗಿದ್ದ ವೇಳೆ ಸ್ಪೀಕರ್ ಅವರಿಗೆ ಸಮಿತಿ ವರದಿ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ಹಾಗೂ ಅಸಂವಿಧಾನಿಕ ಕ್ರಮ. ಸಂವಿಧಾನವನ್ನು ಗೌರವಿಸದಿರುವ ಮುಖ್ಯಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಅರ್ಹರಲ್ಲ. ಕೂಡಲೇ ರಾಜೀನಾಮೆ ನೀಡಿ ಜನಾದೇಶಕ್ಕೆ ತೆರಳಬೇಕೆಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಸರಕಾರದ ಭ್ರಷ್ಟಾಚಾರ ಮತ್ತು ಜನ ವಿರೋಧಿ ನೀತಿಯನ್ನು ವಿರೋಧಿಸುವ ಹಕ್ಕು ಹೊಂದಿದೆ. ಚಳಿಗಾಲದ ಅಧಿವೇಶನದಲ್ಲಿ ನಾವು ಇದನ್ನು ಮಾಡಿದ್ದೇವೆ. ಆಡಳಿತ ಪಕ್ಷ ಸಹನೆಯಿಲ್ಲದೆ ಅಧಿವೇಶನ ಮುಂದೂಡಿ ಚರ್ಚೆಗೆ ಅವಕಾಶ ನಿರಾಕರಿಸಿದೆ ಎಂದು ದೂರಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ